ಬುಧವಾರ, ಜನವರಿ 29, 2025

ಬಾಲಕೃಷ್ಣ ಅಂದು ಇಂದು

 


ಬಾಲಕೃಷ್ಣ ಅಂದು ಇಂದು 

ಅಂಗಳದಲ್ಲಿ ಆಡುತ್ತಾ ಮಣ್ಣ ಮುಕ್ಕಿದೆಯೇನೋ

ತೆರೆ ನಿನ್ನ ಬಾಯಿ ಕಕ್ಕೆಂದಳು ಅಮ್ಮ ಗಾಬರಿಯಾಗಿ

ಮುಸುನಗುತ ಬಾಲ, ತೆರೆಯುತ್ತಾ ಬಾಯಿ ನೋಡೆಂದ

ವಿಶ್ವವನೇ ಕಂಡು ನೋಡಿದಳಾ ತಾಯಿ ಬೆರಗಾಗಿ  

 

ಮುಟ್ಟಬ್ಯಾಡವೋ ಕಂದ, ನೋಡದಿರೆಲೋ ಕಂದ

ನೀನಿನ್ನೂ ಸಣ್ಣವ, ದೊಡ್ಡವನಾಗುವ ತನಕ ಮೊಬೈಲಾ

ನಸುನಗುತ ಬಾಲ, ಒತ್ತುತ್ತಾ, ಕರೆದು  ಅವ್ವ ನೋಡೆಂದ

ವಿಶ್ವವನೇ ಕಂಡು ಮುತ್ತಿಟ್ಟಲು ತಾಯಿ ಹಿಚಕುತ್ತಾ ಗಲ್ಲಾ.

ರಚನೆ : ಡಾ. ಪ್ರಭಾಕರ್ ಬೆಳವಾಡಿ 

ಸೋಮವಾರ, ಜನವರಿ 27, 2025

ಶ್ರೀ ಗುರುರಾಘವೇಂದ್ರ ಭಕ್ತಿ ಗೀತೆ

 

ಗುರು ರಾಯರನ್ನು ಒಲಿಸುವುದು ಹೇಗೆ?

Sri Raghavendra Photos | Sri Raghavendra Images | Guru Shree ...
ತುಂಗೆಯ ಗರ್ಭದಿ ಸ್ನಾನವ ಮಾಡಿ
ಮಡಿಯನು ಉಟ್ಟು ಧ್ಯಾನವ ಮಾಡಿ
ಮೂಲ ರಾಮನ ಕೃಪೆಯನು ಬೇಡಿ
ರಾಯರ ದರ್ಶನ ಮಾಡಲು ಹೊರಡಿ

ರಾಯರ ನೆನೆಯುತ ಮುಂದಕೆ ಸಾಗಿ
ಉರುಳು ಸೇವೆಯ ಮಾಡಿಪರಾಗಿ
ಗುರುಗಳ ಸೇವೆ ಮಾಡಲು ಹೋಗಿ
ರಾಯರ ಪುಣ್ಯ ಪಡೆಯುವರಾಗಿ

ತೀರ್ಥವ ಕುಡಿದು ಪವಿತ್ರರಾಗಿ
ಅಕ್ಷತೆ ಪಡೆದು ಪಾವನರಾಗಿ
ಅನ್ನಪ್ರಸಾದವ ಸೇವಿಪರಾಗಿ
ರಥವನು ಎಳೆಯಲು ಬದ್ಧರಾಗಿ

ನಾಲಿಗೆಯಲ್ಲಿ ರಾಯರ ನುಡಿಯು
ಮಸ್ತಕದಲ್ಲಿ ಮಂತ್ರಾಲಯವು
ತಗ್ಗಿ ನಡೆದರೆ ಬೃಂದಾವನವು
ಬಗ್ಗಿ ನೋಡಿದರೆ ರಾಯರ ಪಾದವು

ಮಾಡುತ ನಡೆಯೋ ಒಳ್ಳೆಯ ಕರ್ಮ
ರಾಯರ ಒಲಿಸಲು ಅದುವೇ ಮರ್ಮ
ಅವರ ಧ್ಯಾನವಾ ಮಾಡುತಾ ಹೋಗು
ಬೃಂದಾವನಕೆ ನೀ ತಪ್ಪದೇ ಬಾಗು

ಭಕ್ತ ಪ್ರಭಾಕರ ಬರೆದಿಹ ರೀತಿ
ಪಾಲಿಸೆ ಸಿಗುವುದು ರಾಯರ ಪ್ರೀತಿ

ರಚನೆ : ಡಾ.  ಪ್ರಭಾಕರ್ ಬೆಳವಾಡಿ

ಶುಕ್ರವಾರ, ಜನವರಿ 24, 2025

ಹನುಮನ ಧ್ಯಾನವ ಮಾಡಿ

 

ಹನುಮನ ಧ್ಯಾನವ ಮಾಡು



 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ನಿನ್ನ ಬಿಡುವೇನೇನಯ್ಯ                       

 

ನಿರತವೂ ಧ್ಯಾನ ಮಾಡುತಾ ನಿನ್ನ

ಊರುತ ಮಂಡಿಯ ಬೇಡುವೆ ನಿನ್ನ

ಮುಕ್ತಿಯು ಎನಗೆ ಬರುವಾ ತನಕ

ಶಕ್ತಿಯ ನೀಡೋ ಇರುವಾ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಾಲವ ಸುತ್ತಿ ಮೇಲಕೆ ಎತ್ತಿ

ಭಯವನು ಬಿತ್ತಿ ಭುವಿಗೇ ಒತ್ತಿ

ಹಚ್ಚಲು ಸುತ್ತ ಬೆಂಕಿಯ ಹುತ್ತ

ಅಂಜುವನೇನೋ ನಿನ್ನಯ ಭಕ್ತ  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಗದೆಯನೇ ಎತ್ತಿ ಬೀಸಿದರೇನು

ಎದೆಯನೇ ಪಾದದಿ ಒತ್ತಿದರೇನು

ನೀಡಲು ನೀನು ಅಗಣಿತ ಶಿಕ್ಷೆ

ಅದುವೇ ಎನಗೆ ರಾಮರಕ್ಷೆ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ

ರಭಸದಿ ಗಾಳಿ ಬೀಸಿದರೇನು

ತರಗೆಲೆಯಂತೆ ಉದರಿದರೇನು   

ಎದೆಯಾ ಸೀಳಿ ನಕ್ಕರೂ ನೀನು 

ಅಂಜೆನು ಹನುಮ ಎಂದಿಗೂ ನಾನು  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನೋ ಹನುಮ ಬಿಡುವೇನೇನಯ್ಯ

ಭಕ್ತಿಯ ಭವದಲಿ ಮುಳುಗಿಹೆ ನಾನು  

ಹಾರುತ ಬಂದು ಕರುಣಿಸೋ ನೀನು  

ದರುಶನ ನೀನು ನೀಡುವ ತನಕ

ಜ್ಞಾನದ ಬೆಳಕ ತೋರುವ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಶಿರದ ಮೇಲೆ ಹಸ್ತವನಿಟ್ಟು

ಕರಗಳ ಮುಟ್ಟಿ ಅಭಯವ ಕೊಟ್ಟು 

ಹರಸುವತನಕ ಬಿಡೆನೋ ನಾನು

ಶಬರಿಯ ಹಾಗೇ ಕಾಯುವೆ ನಾನು 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ                

 

ಅಂಜನಿ ಪುತ್ರನ ಧ್ಯಾನವ ಮಾಡಿ

ನಿತ್ಯವೂ ಅವನ ಹಾಡನು ಹಾಡಿ

ಹನುಮನೇ ಬರುವನು ತಲೆ ತೂಗಿ

ಪ್ರಭಾಕರ ಶರ್ಮನ ಅವ ಅನುರಾಗಿ

ರಚನೆ: ಡಾ. ಪ್ರಭಾಕರ್ ಬೆಳವಾಡಿ

ಬುಧವಾರ, ಜುಲೈ 3, 2024

 

ಚಿಟ್ಟೆ ಚಿಟ್ಟೆ    


 image courtesy Pinterest 
 

ಬೆರಳಿನ ಮುಂದೆ ಗೋಲಿಯು ಇತ್ತು

ನನ್ನಯ ಗಮನ ಗುರಿಯ ಮೇಲಿತ್ತು

ಎದುರಿಗೆ ಇದ್ದವು ಹಲವಾರು ಗೋಲಿ

ನನಗೆ ಬೇಕಿತ್ತು ಆ ಬಣ್ಣದ ಗೋಲಿ

 

ಬೆರಳನು ಬಾಗಿಸಿ ರೊಯ್ಯನೆ ಬಿಟ್ಟೆ

ಹಾರುತ ಬಂದಿತು ಬಣ್ಣದ ಚಿಟ್ಟೆ

ಗೋಲಿಯ ರಭಸಕೆ ತಗುಲಿತು ರೆಕ್ಕೆ

ಅಳುತಲಿ ನಿಂದೆ ದುಃಖವು ಉಕ್ಕೆ

 

ತಿಳಿಯದೆ ಆಯಿತೆ ಚಿಟ್ಟೆಗೆ ಪೆಟ್ಟು  

ಕ್ಷಣದಲಿ ಕಂಡೆನು ಚಿಟ್ಟೆಯ ಗುಟ್ಟು

ಬಿದ್ದಿಹ ಚಿಟ್ಟೆ ನೋಡದೋ ಪಕ್ಕ

ನೋಡಲು ಹೋದರೆ ಹಾರಿತೆ ಠಕ್ಕ!

 

ರಚನೆ: ಡಾ. ಬೆಳವಾಡಿ ಪ್ರಭಾಕರ್

ಸೋಮವಾರ, ಜುಲೈ 1, 2024

 ಕಾಲದ ಮಹಿಮೆ

                                                                image courtesy Pinterest 


 

ಬಿಸಿಲಿನ ತಾಪಕೆ ಅದರುತ ಹಾರಿ

ಕಡಲಿನ ನೀರು ನಭವನು ಸೇರಿ

ಧೂಳಿನ ಕಣಗಳು ಮೋಡದಿ ತೂರಿ

ಮಳೆಯೇ ಸುರಿದಿದೆ ನೋಡದೋ ಜಾರಿ

 

ಬತ್ತಿದ ಗದ್ದೆಗೆ ನೀರಿನ ಹರಿವು

ಭತ್ತದ ತೆನೆಗೆ ನಲಿವೋ ನಲಿವು

ಬಿತ್ತಿದ ರೈತನು ಮರೆತನು ನೋವು

ಭತ್ತದ ಹೊಟ್ಟನು ಮೆಲುಕಿದೆ ಗೋವು

 

ರೈತನ ಕಣಜ ತುಂಬಿತ್ತು

ಬಂಡಿಯು ಸಂತೆಗೆ ಬಂದಿತ್ತು

ವರುಣಗೆ ಪೂಜೆಯು ಸಂದಿತ್ತು

ನೋವಿನ ಛಾಯೆ ನಂದಿತ್ತು

 

ಬೀದಿಯ ಬದಿಯ ವ್ಯಾಪಾರಿ

ಹರಾಜು ಹಾಕಿದ ನಗೆ ಬೀರಿ

ಬಂಗಲೆ ಭೂಪ ಕೊಂಡುಂಡ

ದುಡಿದಾ ರೈತ ನಂಜುಂಡ

 

ರಚನೆ: ಡಾ. ಬೆಳವಾಡಿ ಪ್ರಭಾಕರ್


ಭಾನುವಾರ, ಮಾರ್ಚ್ 5, 2023

ಮಿನಿಭಾರತ

 ರಚನೆ: ಡಾ.ಪ್ರಭಾಕರ ಬೆಲವಾಡಿ 

photo credit PINTEREST courtesy


ಊರ ಮಂದಿರದ ಮುಂಭಾಗದಲ್ಲಿ “ಶ್ರೀ ಕೃಷ್ಣ ಜನ್ಮಾಷ್ಟಮಿ” ಉತ್ಸವದ ಪ್ರಯುಕ್ತ ಹಾಕಿದ್ದ ಬೃಹತ್ ಪೆಂಡಾಲಿನಲ್ಲಿ ದಾಸರ ಹರಿಕೀರ್ತನೆ ನಡೆದಿರುತ್ತದೆ. ಕಿಕ್ಕಿರಿದ ಜನಸ್ತೋಮ.

ದಾಸರು ಸಭಿಕರನ್ನು ಉದ್ದೇಶಿಸಿ, “ಇಂದು ವಿಶಿಷ್ಟವಾದ ಮಿನಿಭಾರತ  ಕತೆಯನ್ನು ಹೇಳುತ್ತೇನೆ, ಆಲಿಸಿ” ಎಂದು ಕೀರ್ತನವನ್ನು ಪ್ರಾರಂಭಿಸುತ್ತಾರೆ.

ಹಸ್ತಿನಾಪುರದ ಚಕ್ರವರ್ತಿ  ಧೃತರಾಷ್ಟ್ರನ ಅರಮನೆಯ ಸಭಾಂಗಣದಲ್ಲಿ ಬಹಳ ಕುತೂಹಲದಿಂದ ಕೌರವರು, ಪಾಂಡವರು, ಭೀಷ್ಮ, ಕೃಪಾಚಾರ್ಯ, ವಿಧುರ, ಧ್ರೋಣಾಚಾರ್ಯ, ಅಂಗ ಪ್ರಭು ಕರ್ಣ, ಇತರ ಅಕ್ಕಪಕ್ಕದ ಪುಟ್ಟ ದೇಶದ ಅರಸರೆಲ್ಲಾ ನೆರೆದಿರುತ್ತಾರೆ. ರಾಜಭವನದ ವಿಶೇಷವಾದ ಸ್ಥಳಗಳ ಅಂತಸ್ತಿನಿಂದ ದ್ರೌಪದಿ, ಕುಂತಿ ಇತ್ಯಾದಿ ಕುರುವಂಶದ ಯುವರಾಣಿಯರೆಲ್ಲಾ ಕಣ್ಣು ಮಿಟುಕಿಸದೇ ಆತಂಕಭರಿತರಾಗಿ ಕುಳಿತಿರುತ್ತಾರೆ. ಮಂಡೋದರಿ ತನ್ನ ಅಚ್ಚುಮೆಚ್ಚಿನ ಪುತ್ರನ ವಿಜಯಕ್ಕಾಗಿ ದೇವಮಂದಿರದಲ್ಲಿ ಪೂಜಾ ನಿರತಳಾ ಗಿರುತ್ತಾಳೆ.

ಧುರ್ಯೋಧನ ಹಸ್ತಿನಾಪುರದ ರಾಜಪಟ್ಟವನ್ನು ಧರ್ಮರಾಯನ ಬದಲು ತನಗೆ ನೀಡಬೇಕೆಂದು ಪಟ್ಟು ಹಿಡಿದಿರುತ್ತಾನೆ. ಇದಕ್ಕೆ ಒಪ್ಪದ ಪಾಂಡವರು  ಯುದ್ಧವಾಗಲಿ ಎಂದು ಕೇಳಿದರೂ ಒಪ್ಪದ ಕೌರವರು ಪಗಡೆಯ ಆಟಕ್ಕೆ ಹಠ ಹಿಡಿಯುತ್ತಾರೆ. ರಣರಂಗದಲ್ಲಿ ಯುಧ್ಧವಾಗಲಿ ಎಂಬ ಭೀಮ, ಅರ್ಜುನರ ಸಲಹೆಯನ್ನು ಧೃತರಾಷ್ಟ್ರ ನಿರಾಕರಿಸಿ, ಪಗಡೆಯ ಆಟದ ಫಲಿತಾಂಶವೇ ನಿರ್ಣಾಯಕ ಎಂದು ಘೋಷಿಸುತ್ತಾನೆ. ಇದಕ್ಕೆ ಶಕುನಿ ಮಾಮನ ಕುಮ್ಮಕ್ಕೆ ಕಾರಣವೆಂದು ಭೀಷ್ಮ, ವಿಧುರ, ಧ್ರೋಣಾಚಾರ್ಯ ಮತ್ತು ಕೃಪಾಚಾರ್ಯರಿಗೆ ತಿಳಿದಿದ್ದರೂ ಅಸಾಯಕರಾಗಿ ಕೈಗಳನ್ನು ಹಿಚುಕಿಕೊಳ್ಳುತ್ತಾ ಭಾರವಾದ ಮನಸ್ಸಿನಿಂದ ಆಸೀನರಾಗಿರುತ್ತಾರೆ.

ವಿಧುರನ ನೀತಿಯಿಂದ ಭೀಮ ಮತ್ತು ಕೃಷ್ಣ ಒಂದು ಒಪ್ಪಂದಕ್ಕೆ ಬಂದಿರುತ್ತಾರೆ. ಧುರ್ಯೋಧನನ ಗರ್ವದಿಂದ, ಶಕುನಿಯ ಕುಯುಕ್ತಿಯಿಂದ ಇಂತಹ ಘೋರ ಅನ್ಯಾಯ ನಡೆಯ ಬಹುದಾಗಿದೆ, ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು, ಇದರಲ್ಲಿ ಕೃಷ್ಣನ ಪಾತ್ರವೇ ಮುಖ್ಯವೆಂದು.

ಪಗಡೆಯ ಆಟಕ್ಕೆ ಸರ್ವ ಸಕಲ ಸಿದ್ಧತೆ ಆಗಿರುತ್ತದೆ. ಒಂದು ಬದಿಯಲ್ಲಿ ಧರ್ಮರಾಯ ಮತ್ತೊಂದು ಬದಿಯಲ್ಲಿ ಧುರ್ಯೋಧನ, ಅವನ ಎಡ ಭುಜಕ್ಕೆ ತಾಗಿದಂತೆ ಶಕುನಿ ಕುಳಿತುಕೊಳ್ಳುತ್ತಾರೆ.

ರಾಜಪುರೋಹಿತರು ಶಂಖ ಊದುವುದರೊಂದಿಗೆ ಪಂದ್ಯ ಪ್ರಾರಂಭವಾಗುತ್ತದೆ. ಧರ್ಮರಾಯ ದಾಳವನ್ನು ಉದುರಿಸುತ್ತಾನೆ. ಅದರಂತೆ ನಡೆ ಪ್ರಾರಂಭವಾಗುತ್ತದೆ. ಧರ್ಮರಾಯನದು ಹಸಿರು ಕಾಯಿಗಳು. ಧುರ್ಯೋಧನನದು ಹಳದಿ ಬಣ್ಣದ್ದು. ಮೊದಲನೆಯ ಆಟ ಪಾಂಡವರ ಪರವಾಗುತ್ತದೆ. ಶಕುನಿ ಕ್ಯಾತೆ ತೆಗೆಯುತ್ತಾನೆ. ಚಾಣಾಕ್ಷತನದಿಂದ ಮೊದಲನೆಯ ಆಟ ಯಾವಾಗಲೂ ದೇವರಿಗೆ ಬಿಟ್ಟದ್ದು. ಆದ್ದರಿಂದ ಇದನ್ನು ಗಣನೆಗೆ ತೆಗೆದುಕೊಳ್ಳಬಾರದು ಎನ್ನುತ್ತಾನೆ.

ಮೊದಲೇ ಕೋಪ ಭರಿತನಾಗಿದ್ದ ಭೀಮ ತನ್ನ ಗಧೆಯನ್ನು ಭೂಮಿಗೆ ಅಪ್ಪಳಿಸುತ್ತಾನೆ. ಸಭಾಂಗಣದ ನೆಲವೆಲ್ಲಾ ಅಲುಗಾಡಿ, ಉತ್ಪತ್ತಿಯಾದ ಶಬ್ದ ಅಲ್ಲಿರುವ ಎಲ್ಲಾ ಕಂಬಗಳಿಂದ ಪ್ರತಿಧ್ವನಿಸುತ್ತದೆ. ಪಕ್ಕದಲ್ಲೇ ಆಸೀನರಾಗಿದ್ದ ನಕುಲ ಸಹದೇವರು ಭೀಮನನ್ನು ಸಂತೈಸುತ್ತಾರೆ.

ಅರ್ಜುನ ಉದ್ವೇಗವನ್ನು ತಡೆಯಲರಾದೆ ತನ್ನ ಬಿಲ್ಲಿನ ತಂತಿಯನ್ನು ಮೀಟುತ್ತಾನೆ. ಅದರ ಜೇಂಕಾರಕ್ಕೆ ನೆರೆದಿದ್ದವರೆಲ್ಲಾ ಕಂಪಿಸುತ್ತಾರೆ. ಭೀಷ್ಮ ಪಿತಾಮಹ ಕಣ್ಸನ್ನೆಯಿಂದ ಅರ್ಜುನನನ್ನು ಸುಮ್ಮನಾಗಿಸುತ್ತಾರೆ.

ಮುಂದಿನ ಆಟಗಳನ್ನೆಲ್ಲಾ ಧುರ್ಯೋಧನ ಗೆಲ್ಲುತ್ತಾ ಹೋದಂತೆ ಧರ್ಮರಾಯ ತನ್ನ ಸರ್ವಸ್ವವನ್ನೂ ಕಳೆದುಕೊಂಡು ಬಿಡುತ್ತಾನೆ. ಈ ಸಮಯದಲ್ಲಿ ಇನ್ನೂ ಅವಮಾನಿಸಬೇಕೆಂದು ಮತ್ತು ಹಿಂದೆ ತನಗಾದ ಅಪಹಾಸ್ಯಕ್ಕೆ ಮುಯ್ಯಿ ತೀರಿಸಿಕೊಳ್ಳಬೇಕೆಂದು ಧುರ್ಯೋಧನ ಮತ್ತೆ ಧರ್ಮರಾಯನನ್ನು ಪ್ರಚೋದಿಸಿ, ಒಂದು ವೇಳೆ ಧರ್ಮರಾಯ ಆಟ ಮುಂದುವರೆಸಲು ಬಯಸಿದರೆ, ಧ್ರೌಪದಿಯನ್ನು ಪಣಕ್ಕೆ ಇಟ್ಟು ಆಡಬಹುದೆಂದು ಸೂಚಿಸುತ್ತಾನೆ.

ಈ ಸೂಚನೆಗೆ ಭೀಮ, ಅರ್ಜುನರ ಮೊದಲಾಗಿ ಎಲ್ಲರೂ ತಮ್ಮ ಅಸಮ್ಮತಿಯನ್ನು ಪ್ರಕಟಿಸಿ, ಪ್ರತಿಭಟಿಸುತ್ತಾರೆ. ಆದರೆ, ದುಶ್ಯಾಸನ, ಕರ್ಣ ಆದಿಯಾಗಿ ಕೌರವ ಪುತ್ರರೆಲ್ಲಾ ಧುರ್ಯೋಧನನನ್ನು ಬೆಂಬಲಿಸುತ್ತಾರೆ. ಕುಂತಿ ಮತ್ತು ಗಾಂಧಾರಿ ತಮ್ಮ ಮನಸ್ಸಿನಲ್ಲೇ ವ್ಯತೆ ಪಡುತ್ತಾರೆ. ಧ್ರೌಪದಿಯ ಪರಿಸ್ಥಿತಿಯಂತೂ ಹೇಳಲಸಾಧ್ಯದಂತೆ ಆಗಿಬಿಡುತ್ತದೆ.

ಭೀಷ್ಮನಾದಿಯಾಗಿ ಮುತ್ಸುದ್ದಿಗಳೆಲ್ಲಾ ತಿಳಿದೂ, ಬೋನಿನಲ್ಲಿ ಬಿದ್ದಿರುವ ಘೋರ ವ್ಯಾಘ್ರಗಳಂತೆ ಚಡಪಡಿಸುತ್ತಾರೆ.

ವಿಧುರ ಕೆಲ ಕ್ಷಣ ಅಲ್ಲಿಂದ ಮಾಯವಾಗಿ ಗೌಪ್ಯವಾಗಿ ಕೃಷ್ಣನ ಜೊತೆ ಮಾತನಾಡಿ ಬಂದು ನೇರವಾಗಿ ಧ್ರೌಪದಿ ಇರುವಲ್ಲಿಗೆ ಹೋಗಿ  ಅವಳನ್ನು ಒಪ್ಪಿಸಿ ಜೂಜಾಟದ ವೇದಿಕೆಗೆ ಬರುವಂತೆ ಮಾಡುತ್ತಾನೆ.

ಧರ್ಮರಾಯ ಮರುಮಾತಿಲ್ಲದೇ ಧ್ರೌಪದಿಯನ್ನು ಒಂದು ಷರತ್ತಿನೊಂದಿಗೆ ಪಣಕ್ಕೆ ಒಡ್ಡುತ್ತಾನೆ. ಒಂದುವೇಳೆ ಈ ಪಂದ್ಯವನ್ನು ಧುರ್ಯೋಧನ ಸೋತರೆ, ಹಸ್ತಿನಾಪುರವನ್ನು ಆಳುವ ಮಹದಾಸೆಯನ್ನು ಬಿಟ್ಟು, ತನ್ನ ಎಲ್ಲಾ ಕೌರವ ತಮ್ಮಂದಿರೊಂದಿಗೆ ಅನತಿ ದೂರದ ಅರಣ್ಯದಲ್ಲಿ ನೆಲೆಸಬೇಕೆಂದು ತಿಳಿಸುತ್ತಾನೆ.

ಧುರ್ಯೋಧನ ಶಕುನಿ ಮಾಮನ ಜೊತೆ ಪರಾಮರ್ಶಿಸಿ ಈ ಷರತ್ತಿಗೆ ಒಪ್ಪುತ್ತಾನೆ. ಶಕುನಿಗೆ ತನ್ನ ಕುಟಿಲ ದಾಳಗಳ ಮೇಲೆ ಅಪಾರ ನಂಬಿಕೆ ಇರುತ್ತದೆ.

ಪಂದ್ಯ ಅಂತಿಮಘಟ್ಟಕ್ಕೆ ಬಂದು ಇನ್ನು ಒಂದೇ ನಡೆ ಉಳಿದಿರುತ್ತದೆ.  ಧರ್ಮರಾಯ ಸಾಷ್ಟಾಂಗ ಶಿರಭಾಗಿ ಶ್ರೀ ಕೃಷ್ಣ ಪರಮಾತ್ಮನಿಗೆ ವಂದಿಸಿ “ಶ್ರೀ ಕೃಷ್ನಾರ್ಪಣಮಸ್ತು” ಎನ್ನುತ್ತಾನೆ.  ಧ್ರೌಪದಿಯೂ ತನ್ನ ಹಿರಿಯ ಪತಿಯ ಪಕ್ಕದಲ್ಲಿ ನಿಂತು ಪಂಚಾಂಗ ನಮಸ್ಕರಿಸುತ್ತಾಳೆ. ಕೊನೆಯ ನಡೆಗಾಗಿ ಧರ್ಮರಾಯ ಧುರ್ಯೋಧನನ ಕೈಯಿಗೆ ದಾಳಗಳನ್ನು ನೀಡುತ್ತಾನೆ.

ಈ ರೀತಿ ಮಾಡಲು ಧರ್ಮರಾಯನಿಗೆ ಹಿಂದಿನ ಅನುಭವಗಳು ಮತ್ತು ಕೃಷ್ಣನ ಲೀಲೆಯ ಪ್ರಭಾವದ ಅರಿವೇ ಕಾರಣ.

ಇಡೀ ರಾಜಸಭಾಂಗಣದ ದಿಗ್ಗಜರೆಲ್ಲಾ ನಿಬ್ಬೆರಗಾಗಿ ಕೆನ್ನೆಗಳ ಮೇಲೆ ತಮ್ಮ ಎರಡೂ ಕೈಗಳನ್ನು ಇಟ್ಟು ಕುಳಿತಿರುತ್ತಾರೆ.

ಈ ಪಗಡೆಯಾಟ ಕೌರವ ಪಾಂಡವರ ಆಂತರಿಕ ಘರ್ಷಣೆ ಅನ್ನುವುದಕ್ಕಿಂತ, ನ್ಯಾಯ ಅನ್ಯಾಯ, ಧರ್ಮ ಅಧರ್ಮಗಳ ನಡುವಿನ ನಿರ್ಣಯದ ಘೋರ ಯುದ್ಧವಾಗಿ ಪರಿಣಮಿಸಿರುತ್ತದೆ.

ಇತ್ತ ಶಕುನಿಗೆ ತನ್ನ ಮಾಯಾ ದಾಳಗಳ ಮೇಲೆ ಅಪಾರ ನಂಬಿಕೆ.

ಶಕುನಿ ಯಾರಿಗೂ ತಿಳಿಯದಂತೆ ದಾಳಗಳನ್ನು ಬದಲಾಯಿಸಿ ತನ್ನ ಮಾಯಾ ದಾಳಗಳನ್ನು ಧುರ್ಯೋಧನನ ಪರವಾಗಿ ಉರುಳಿಸುತ್ತಾನೆ. ಪಾಪ ಆತನಿಗೇನು ಗೊತ್ತು ಕೃಷ್ಣನ ಲೀಲೆ.

ಸಖದಾಶ್ಚರ್ಯ. ಶಕುನಿಗೆ ನಂಬಲಾಗುವುದಿಲ್ಲ. ಘರ ಬಡಿದವರಂತೆ ಕೂತಲ್ಲೇ  ಕುಸಿಯುತ್ತಾನೆ. ಧುರ್ಯೋಧನನ ಜಂಘಾಬಲವೇ ಉಡುಗಿ ಹೋಗುತ್ತದೆ. ತಲೆ ಸುತ್ತಿದಂತಾಗಿ  ತನ್ನ ಹಸ್ತಿನಾಪುರದ ಅರಸನಾಗುವ ಕನಸು ಹುಣಸೆಹಣ್ಣಿನ ರಭಸದ ಅಲೆಗಳಲ್ಲಿ ಕೊಚ್ಚಿಕೊಂಡು ಹೋದಂತೆ ಭಾಸವಾಗುತ್ತದೆ. ದಾಳಗಳು ಧರ್ಮರಾಯನ ವಿಜಯ ಪತಾಕೆಯ ಪರವಾಗಿ ಬೀಳುತ್ತವೆ.

ದ್ವಾರಕೆಯಲ್ಲಿ ಕೃಷ್ಣ ಮುಸುನಗುತ್ತಾ ರುಕ್ಮಿಣಿ ಭಾಮೆಯರ ಸಂಗಡ ಪಗಡೆ ಆಡುತ್ತಾ ಕುಳಿತಿರುತ್ತಾನೆ. ಆತ ಕ್ಷಣ ಮಾತ್ರದಲ್ಲಿ ಕಪಟಿಯ ಕಪಟ ದಾಳಗಳನ್ನು ತನ್ನ ಮಾಯೆಯಿಂದ ಬದಲಿಸಿರುತ್ತಾನೆ.

ರುಂಡ ಮುಂಡಗಳ ಚೆಲ್ಲಾಟವಿಲ್ಲದೆ, ರಕ್ತದೋಕುಳಿಯಿಲ್ಲದೇ, ವೀರಾಧಿ ವೀರರ ಮಡದಿಯರು ವಿಧವೆಯರಾಗದೇ, ಗಜ, ಅಶ್ವಾಧಿಗಳಿಗೆ ಕೊಂಚವೂ ನೋವಾಗದೇ, ಕುರುಕ್ಷೇತ್ರ ಕಿರುಕ್ಷೇತ್ರವಾಗಿ ಧರ್ಮ ಹಸ್ತಿನಾಪುರದ ರಾಜನಾಗಿ, ಅಧರ್ಮ ವನದಲ್ಲಿ ಒಣವಾಸ ಮಾಡುವಂತಾಗುತ್ತದೆ.

ದಾಸರು ತಂಬೂರಿ ಮೀಟುತ್ತಾ, “ಕೃಷ್ಣನ ನೆನೆದರೆ ಕಷ್ಥವೊಂದಿಷ್ಟಿಲ್ಲ” ಎಂದು ಪದ ಹೇಳುತ್ತಾ ನಿರ್ಗಮಿಸುತ್ತಾರೆ.

ಭಾನುವಾರ, ನವೆಂಬರ್ 27, 2022

ಶೃಂಗೇರಿಯ ನವರಾತ್ರಿ ಉತ್ಸವ

 


ಛಾಯಾ ಚಿತ್ರ pinterest ಅವರಿಂದ ಕೃಪೆ 

ಶೃಂಗೇರಿಯ ನವರಾತ್ರಿ ಉತ್ಸವ

 

ಶೃಂಗಗಿರಿಯ ಸಿರಿ ಬನಗಳಲಿ, ತುಂಗೆಯ ತಿಳಿ ಸೆರಗಿನಲಿ
ನವರಾತ್ರಿಯ ನವ ವೈಭವದ ಉತ್ಸಾಹದ ದಿನಗಳಲಿ
ನವದುರ್ಗೆಯರ ಭವ್ಯ ರೂಪದರ್ಶನ, ನಿತ್ಯ ನವ ನೂತನ.

 

ಮಧು ಕೈತಭ, ಶುಂಭ-ನಿಶುಂಭ, ಮಹಿಷಾಸುರರ    

ಮರ್ಧಿನಿಯ ಹಿರಿಮೆಯ, ಛಲಬಿಡದ ಮಹಿಮೆಯ

ಕಹಳೆಯೋ, ಇದು ರಣ ಕೇಕೆಯ ಮೊಳೆತವೋ...

ರಕ್ಕಸರುಗಳ ದಾಳಿಯ, ಮಹಿಷರೂಪದ ಗೂಳಿಯ

ಸೊಕ್ಕನಡಗಿಸಿಹ ದೇವಿಯ, ಠಕ್ಕರಳಿಸಿದ ಮಾತೆಯ

ಡಿಂ ಡಿಮವೋ, ಇದು ರಣಚಂಡಿಯರ ಡಿಂ ಡಿಮವೋ.     

ಜಗತ್ಪ್ರಸೂತಿಕೆ ಜಗನ್ಮಾತೆಯ, ಹಂಸವಾಹನೆ ಬ್ರಾಹ್ಮಿಯ,

ವೃಶಭವಾಹನೆ ಮಾಹೇಶ್ವರಿಯ, ಸೊಬಗಿನ ಐಸಿರಿಯೋ.

 

ಮಯೂರವಾಹನೆ ಕೌಮಾರಿಯ, ಗರುಡವಾಹನೆ ವೈಷ್ಣವಿಯ ,

ಕಂಗೊಳಿಪ ಕಣ್ಸೆಳೆವ ಸೋಜಿಗದ ರೋಚಕ ನೋಟವೋ. 

 

ಇಂದ್ರಾಣಿಯ, ಮೋಹಿನಿಯ, ಚೈತನ್ಯದ ಸಿಂಹವೇರಿಪ ಚಾಮುಂಡಿಯ,

ಕಣ್ ಕಿಡಿಯ ಸುರಸುಂದರ ತ್ರಿಪುರ ಸುಂದರಿಯ ಚಿತ್ತಾರವೋ 

 

ಗಜಲಕ್ಷ್ಮಿ, ರಾಜರಾಜೇಶ್ವರಿ ರಾರಾಜಿಸುವ ವಿಜಯದಶಮಿಯ  

ವಿಜೃಂಭಣೆಯ ಮನಮೋಹಕ ದೃಷ್ಯದಾಲಿಂಗನವೋ

 

ನಿತ್ಯ ಹರಿದ್ರಾಕುಂಕುಮದಲಿ, ನಿತ್ಯ ತೇಯ್ದಗಂಧದ ಘಮದಲಿ    

ಅಭಿಷೇಕದ ವೈಭವ, ನಿತ್ಯೋತ್ಸವ ದೇವಿ ನಿನಗೆ ನಿತ್ಯೋತ್ಸವ.

 

ಕಾಣರಿಯದ ವೈಭವದಲಿ, ವೀಣಾ ವಾದನದ ತರಂಗಗಳಲಿ

ಸಾಲಂಕೃತ ಮಂಟಪದಲಿ,  ಮುತ್ತು,ರತ್ನಭರಿತ ಸಿಂಹಾಸನದಲಿ,

ಪುಷ್ಪೋತ್ಸವ ತಾಯೆ ನಿನಗೆ ಪುಷ್ಪೋತ್ಸವ, ನಿತ್ಯೋತ್ಸವ.                                  

                                                         

ಶೃತಿ, ಸ್ಮೃತಿ, ಪುರಾಣ ಸಂಪುಟಗಳಲಿ, ಚತುರ್ವೇದ ಪಂಡಿತರ ಕಂಠ ತೇಲಿ

ಮಂತ್ರೋತ್ಸವ ತಾಯೆ ಮಂತ್ರೋತ್ಸವ, ನಿನ್ನ ಸ್ತುತಿಸುವ ಮಂತ್ರೋತ್ಸವ.

ಶೃಂಗೇರಿಯ ಭವ್ಯ ಪಥಗಳಲಿ, ತುಂಗೆ ನದಿಯ ಶಾಂತತೆಯ ತಟಗಳಲಿ
ಗುಡಿಗೋಪುರಗಳ ಉತ್ತುಂಗದಲಿ, ದೀಪೋತ್ಸವ ತಾಯೆ ದೀಪೋತ್ಸವ.

ಸ್ವರ ಲಹರಿಯ ಗಾಯನೋತ್ಸವ, ತಾಯೆ ನಿನಗೆ ನಿತ್ಯೋತ್ಸವ

ದೀಪೋತ್ಸವ ದೇವಿ ಧ್ಯಾನೋತ್ಸವ, ತಾಯೆ ಅನ್ನದಾನೋತ್ಸವ.

 

ತೆನೆ ಕಟ್ಟಿ, ಕಂದನೆಟ್ಟ, ಚಿನ್ನದಂಬಾರಿಯಲಿ, ನಿನ್ನ ಅಮೋಘ ದರ್ಶನ

ಮಂಗಳ ವಾದ್ಯ ಹಿಮ್ಮೇಳದಲಿ, ಕೀಲ ನರ್ತನ, ಡೋಲು ಸಹಿತ ಕೀರ್ತನ.

 

ನೆರೆದ ಭಕ್ತರ ಮನಸೆಳೆವ ಆ ದಿವ್ಯ ರಥದಲಿ, ತೆಂಗ ಒಡೆದ, ಬಾಳೆ ಎಸೆದ,

ಆರತಿಯನೆತ್ತ ಲೀಲೆಯಲಿ, ನಿನಗೆ ರಥೋತ್ಸವ, ತಾಯೆ ರಥೋತ್ಸವ.

ಭೃಂಗಗಳ ಸವಿ ಝೇಂಕಾರದಲಿ, ತುಂಗಾ ನದಿಯ ಪಾವನದೊಡಲಲಿ  
ಮತ್ಸ್ಯಗಳು ಕುಣಿದು ನರ್ತಿಸುವಲಿ, ಸತ್ವಭರಿತ ವೇದಘೋಷಗಳ ಲೇಪನ.   

                            

ನಾಗಸ್ವರಗಳ ನೀನಾದದಲಿ, ಶೃಂಗಗುರುವರ್ಯರ ನೇತೃತ್ವದಲಿ  

ನಿನಗೆ ತೆಪ್ಪೋತ್ಸವ, ತಾಯೆ ತೆಪ್ಪೋತ್ಸವ, ನಿತ್ಯೋತ್ಸವ.

 

ಮಹಿಷಾಸುರನ ಮರ್ಧಿಸಿದ ದೇವರರಿಮೆಯ, ಸಂವತ್ಸರ, ಮನ್ವಂತರ ನೆನೆಸುವ  
ವಿಜಯೋತ್ಸವ ತಾಯೆ, ನಿನಗೆ ವಿಜಯೋತ್ಸವ, ದೇವಿ ವಿಜಯೋತ್ಸವ.

ದೀಪೋತ್ಸವ ತಾಯೆ, ದೀಪೋತ್ಸವ, ವಿಜಯೋತ್ಸವ ತಾಯೆ, ವಿಜಯೋತ್ಸವ.

 

ಊದುತ ದೇವಿಯ ರಣ ಕಹಳೆಯ, ಬಾರಿಸು ಮಾತೆಯ ಡಿಂ ಡಿಮವ,

ಹಾಡುತ ದೇವಿಯ ವಿಜಯ ಗಾಥೆಯ, ಬಾರಿಸು ಮಾತೆಯ ಡಿಂ ಡಿಮವ.

 

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಉತ್ತರಹಳ್ಳಿ, ಬೆಂಗಳೂರು .

ದೂ: 9448488910


Let The Earth Breathe

  [ Folk Tune Adaptation] [“Let the Earth Breathe”] [Dr Belavadi Prabhakar] [Refrain (Chorus)] Let the earth breathe, let the earth ...