ಭಾನುವಾರ, ಏಪ್ರಿಲ್ 27, 2025

ಊರ ಕನ್ನಿಕೆ ಊರ ಬಯಕೆ

 


ಊರ ಕನ್ನಿಕೆ ಊರ ಬಯಕೆ

 

ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು

ಸೀರಿಯ ನೆರಿಗೆಯ ಮಿಂಚಿನ ಅಂಚನು ಸೊಂಟದ ಮ್ಯಾಗೆ ಗಂಟನು ಮಾಡಿ ಇಟ್ಟಿತ್ತು

ನೀರಿನ ಮುತ್ತು ಜಾರುತಲಿತ್ತು ಕಂಗಳ ಮ್ಯಾಗಿನ ಅಂಗಳದಾಗ ಆಡತಿತ್ತು ಕಾಡುತಲಿತ್ತು

ಊರಿನ ಕೇರಿಯ ಕೆರೆಯ ಬದಿಯ ಪೊದೆಯ ಮ್ಯಾಗೆ ಹದ್ದು ತುಣುಕುತ ಇಣುಕುತಲಿತ್ತು

ಏನ ಬಿಳುಪು ಏನ ಹೊಳಪು ಹಂಸವೆ ನಾಚಿ ಊರ ಆಚಿ ಕೊರಳನೇ ಹೊರಳಿಸಿ ನಿಂತಿತ್ತು

ಏನ ಅಪ್ಸರೆ ಮಣಿಯೋ ಸೌಂದರ್ಯದ ಗಣಿಯೋ ಕಣ್ಣ ರೆಪ್ಪಿ ಕುಣಿಯದೇ ನಿಂತಂತಾಗಿತ್ತು

ಏನ ನೋಡೆ ನೀಳ ಜಡೆ ಬಾನಿನ ಗೂಡ ಆಡ ಬಯಸಿ ಅರವೀಗೂಡ ಕೆಳಗಾ ಮ್ಯಾಗೆ ಆಗಿತ್ತು

ಏನ ಬಟ್ಟಿ ಏನ ಬುಟ್ಟಿ ಕೆರಿಯ ನೀರು ಸೀರಿಗೆ ಅಂಟಿತ್ತು ನೋಡಿ ನೋಡಿ ನನ್ನ ಕಣ್ಣೇ ಬತ್ತಿತ್ತು

ಅವಳ ಮಾಟವೇ ಹಾಗಿತ್ತು ನೋಟವೇ ಹಾಗಿತ್ತು ತೋಟವೇ ಹಾಗಿತ್ತು ಭಗವಂತನ ಆಟವೇ ಹಾಗಿತ್ತು

ಅವಳ ಚಿತ್ರವ ಬಿಡಿಸಲು ನಿಂತ ಕಲೆಗಾರನ ಕುಂಚ ಅಲುಗಿತ್ತು ನೋಡ ಚಿತ್ತವೇ ಕಲಕಿತ್ತು

ಅವಳು ಆರ ಸೊತ್ತೋ ಆರ ಮುತ್ತೋ ಆರ ಸೆಳೆಯತ್ತೋ ಬ್ರಹ್ಮನ ಪುಟದಲಿ ಬರೆದಿತ್ತೋ

ಅವಳ ಅಂದವ ಸ್ಮರಿಸಿ ಚೆಂದವ ಹರಸಿ ಶ್ರೀಗಂಧದ ಬಂಧನ ಊರಿಗೆ ಊರೇ ಬಯಸಿತ್ತೋ.

ಮಂಗಳವಾರ, ಏಪ್ರಿಲ್ 22, 2025

'ಹಂಸವೇರಿ ಬಂತು ಶಾರದಾವಿಲಾಸ'

 

'ಹಂಸವೇರಿ ಬಂತು ಶಾರದಾವಿಲಾಸ'

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಮುಗಿಲಜಾರಿ ಮೋಡತೂರಿ ಕೋರಿ ಬಂತು ಕಲ್ಪನಾವಿಲಾಸ

ಪದಕೆ ಹದದ ವಿವಿಧ ವಿಧದ ಬಂತು ಪ್ರಾಸ ಪಡದೆ ತ್ರಾಸ

ಒಂದು ಮಿಂಚು ಒಂದು ಕಂಚು ಆದಿ ಅಂತ್ಯದಾ ಸಹವಾಸ

ಒಂದು ಚಿಗುರು ಒಂದು ಒಗರು ಅದು ಆಗಬಲ್ಲದೇ ಇತಿಹಾಸ

 

ನಾದವಿಲ್ಲ ವಾದವಿಲ್ಲ ವೇದವಿಲ್ಲ ಸ್ವಾದವಿಲ್ಲ ಬರೆದ ಭಾವಗೀತೆ

ಅಂಬಿಕಾತನಯನಂತೆ ಬರೆವುದೇನು ಚುಟುಕು ಹೊಡೆವ ಮಾತೆ

ಪದಗಳಲ್ಲಿ ಬೆರಗ ತುಂಬು ಮರುಗ ತುಂಬು ಕುಣಿವುದಾಗ ಗೀತೆ

ಕೇಳಿ ಮುದದಿ ಓದಿ ಮನದಿ ಹಾಡಿ ಹದದಿ ನುಲಿವರದರ ಗಾಥೆ

 

ಮೋಡ ಮರುಗಿ ಬಂತು ಕರಗಿ ತಿರುಗಿ ಹೋಗಿ ಮುಗಿಲುವಾಸ

ಎಲ್ಲೆ ಮೀರಿ ನಗೆಯ ಬೀರಿ ಸಾಲ ದೂರಿ ಬರಿದೆ ಮಂದಹಾಸ

ಒಂದು ಬೆಡಗು ಒಂದು ತುಡುಗು ಒಂದು ಗುಡುಗು ಅಟ್ಟಹಾಸ

ಬೇಡ ಮಡಗು ಅಗೋ ಹಂಸವೇರಿ ಬಂತು ಶಾರದಾವಿಲಾಸ

ಸೋಮವಾರ, ಏಪ್ರಿಲ್ 21, 2025

“ತಾನನ ತನಾ ಬಾಳು ನಂದನ”

 

“ತಾನನ ತನಾ ಬಾಳು ನಂದನ”

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

 

ಅಂಬಿಕಾತನಯದತ್ತ

ನಾ ಬರೆದೇನ ಮತ್ತ

ಎತ್ತ ಬೇಡ ನೀ ಬೆತ್ತ

ಎಲ್ಲಾ ನಿನ್ನದೇ ಚಿತ್ತ

ತಾನನ ತನಾ ಬಾಳು ನಂದನ

 

ನಾನು ವರ ನೀನು ವಧು

ನಾನು ಮೆದು ನೀನು ಮೃದು

ಅರಿತು ಬಾಳೋಣ

ಬೆರೆತು ಆಡೋಣ

ತಾನನ ತನಾ ಬಾಳು ನಂದನ

 

 

ನಾನು ಗಿಣ್ಣು ನೀನು ಹಣ್ಣು  

ಮೆದ್ದು ನೋಡು ಬಾ

ನಾನು ಉಣ್ಣೆ ಸೀತ ಹೆಣ್ಣೆ

ಹೊದ್ದು ನೋಡು ಬಾ

ತಾನನ ತನಾ ಬಾಳು ನಂದನ

 

 

ನಾನು ಗಿಡ ನೀನು ಬುಡ

ನೀರ ಹರಿಸೆ ಬಾ

ನಾನು ತಾಟು ನೀನು ಸೌಟು

ಊಟ ಬಡಿಸೆ ಬಾ

ತಾನನ ತನಾ ಬಾಳು ನಂದನ

 

 

ನಾನು ಘಮ ನೀನು ಸುಮ

ಜಗವ ರಮಿಸೆ ಬಾ

ನಾನು ಜಡೆ ನೀನು ಬಿಡೆ   

ಮಾಲೆ ಮುಡಿಸೆ ಬಾ

ತಾನನ ತನಾ ಬಾಳು ನಂದನ

 

ನಾನು ನಾರಿ ನೀನು ಸೀರಿ

ಉಡಿಸಿ ತೊಡಿಸೆ ಬಾ

ನಾನು ಹಾಲು ನೀನು ಜೇನು

ಬೆರೆಸಿ ತಣಿಸೆ ಬಾ

ತಾನನ ತನಾ ಬಾಳು ನಂದನ

ಅಜ್ಜಿ ಮೊಮ್ಮಕ್ಕಳ ಪುಟ್ಟ ಪ್ರಸಂಗ

 

 

Thanks to Pinterest photo

ಸ್ವಾಭಾವಿಕ ಅಲ್ಲವೇ?

ಕರ್ತೃ: ಡಾ. ಪ್ರಭಾಕರ್ ಬೆಳವಾಡಿ

ಅಜ್ಜಿ ಮೊಮ್ಮಕ್ಕಳ ಪುಟ್ಟ ಪ್ರಸಂಗ

ಮೊನ್ನೆ ನಮ್ಮ ಮನೆಯಲ್ಲಿ ಅಜ್ಜಿ ಮತ್ತು ಪುಟ್ಟ ಮೊಮ್ಮಗ ಆಟ ಆಡುತ್ತಿದ್ದರು. ಆಚಾನಕ್ಕಾಗಿ ಇಬ್ಬರೂ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದರು. ಮಗು ಅಳಲು ಆರಂಭಿಸಿತು. ಮನೆಯವರೆಲ್ಲಾ ಏನಾಯಿತೋ ಎಂದು ಮಗುವನ್ನು ಎತ್ತಿಕೊಂಡು ನೋಡಿ ಸಮಾಧಾನ ಪಡಿಸಿದರು.

ಪಾಪ ವಯಸ್ಸಾದ ಅಜ್ಜಿಗೆ ಯಾರೂ ಕೇಳಲಿಲ್ಲ, ನೋಡಲಿಲ್ಲ. ಅಲ್ಲೇ ಬರೆಯುತ್ತ ಕೂತಿದ್ದ ಮೊಮ್ಮಗಳು

ಅಜ್ಜಿಯ ಕಡೆ ನೋಡಿದಳು. ಮಗುವಿನ ಹಲ್ಲು ಚುಚ್ಚಿ ಅಜ್ಜಿಯ ಹಣೆಯಲ್ಲಿ ರಕ್ತ ಬರುತ್ತಿತ್ತು.

ಪಾಪು ಹುಟ್ಟಿದ ಮೇಲೆ ತನ್ನ ಮೇಲಿನ ಪ್ರೀತಿ ಕಡಿಮೆ ಆಗಿದೆಯೆಂದು ಅವಳಿಗೆ ಭಾಸವಾಗುತ್ತಿತ್ತು. ತನ್ನ ಜಾಗವನ್ನು ತಮ್ಮ ಆಕ್ರಮಿಸಿ ಕೊಂಡಿದ್ದ. ಮನಸ್ಸಿನಲ್ಲೇ ಸಿಟ್ಟು ತುಂಬಿತ್ತು.

ಓಡಿ ಹೋಗಿ ಬ್ಯಾಂಡ್ ಏಡ್ ತಂದು ಅಜ್ಜಿಯ ಹಣೆಗೆ ಹಾಕಿದಳು.

"ಅಜ್ಜಿ ನಿನಗೆ ಮೊದಲೇ ಹೇಳಿದ್ದೆ. ಅವನು ತುಂಟ. ಅವನ ಜೊತೆ ಆಡಬೇಡ ಎಂದು. ನನ್ನ ಮಾತು

ನೀನೂ ಕೇಳಲ್ಲ" ಎಂದು ಉಪಚರಿಸಿದಳು.

ಅನೇಕ ಮನೆಗಳಲ್ಲಿ ಇದು ಸ್ವಾಭಾವಿಕ ಅಲ್ಲವೇ.

ಸಧ್ಯ ಅಜ್ಜಿಯ ಪುಣ್ಯ. ಸೊಸೆ ನಿಮ್ಮಿಂದಾನೆ ಮಗು ಅತ್ತಿದ್ದು ಅಂದು ಬೈಯಲಿಲ್ಲ.

 

Let The Earth Breathe

  [ Folk Tune Adaptation] [“Let the Earth Breathe”] [Dr Belavadi Prabhakar] [Refrain (Chorus)] Let the earth breathe, let the earth ...